Tuesday, 27 October 2015

ಅಖ್ಲಾಕ್

(ಈ ಕಥೆಯ ಪಾತ್ರ, ಸನ್ನಿವೇಶಗಳು ಕೇವಲ ಕಾಲ್ಪನಿಕವಾಗಿದ್ದರೆ ಚೆನ್ನ, ಎಂದು ಹಾರೈಸಿ..)
ಅಖ್ಲಾಕ್:
ಆತ್ಮಹತ್ಯೆಯ ಮೆಟ್ಟಿಲೇರಿ ಅದಾಗಲೇ ಬಂಡೆಪ್ಪ ಇಳಿದಾಗಿತ್ತು. ಎರಡು ಮಕ್ಕಳ ಪಾಪದ ಮುಖಗಳು ತನ್ನ ಕರ್ತವ್ಯವನ್ನು ಪದೇ ಪದೇ ನೆನಪಿಸಿಕೊಡುತ್ತಿದ್ದವು. ಕಳೆದ ವರ್ಷದ ಹಾಗೆ ಈ ವರ್ಷವೂ ಇರುವ ಒಂದೇ ಒಂದು ಎಕರೆಯ ಹೊಲ ಬರಡಾಗಿತ್ತು. ಇದ್ದ ಒಂದು ಹಸುವನ್ನು ಸಾಲ ತೀರಿಸಲು ಯಾವಾಗಲೋ ಮಾರಿಯಾಗಿತ್ತು. ಕೊಟ್ಟ ಸಾಲ ಕೇಳಲು ಊರ ಗೌಡ ಹಲವಾರು ಬಾರಿ ಧಮಕಿ ಕೊಟ್ಟಿದ್ದ. ಅವನೇನಾದರೂ ಅಸಲಿಗೇ ಕೊಲ್ಲಿಸಿದರೂ ಅವನ ಕೈಯಲ್ಲಿ ಸಾಯುವದಕ್ಕಿಂತ ತಾನೇ ತನ್ನ ಪ್ರಾಣ ತೆಗೆದುಕೊಳ್ಳುವದು ಒಳ್ಳೆಯದೆನಿಸಿತ್ತು.
ಆದರೆ ಅದೆಲ್ಲಿಂದಲೋ ಕೇಳಿದ್ದ, ಪಕ್ಕದ ಊರಿನ ಸಿರಿವಂತ ಹೆಂಗಸೊಬ್ಬಳು ತನ್ನ ಹುಟ್ಟುಹಬ್ಬಕ್ಕೆ ಗೋದಾನ ಮಾಡುತ್ತಿದ್ದಾಳೆಂದೂ, ತನ್ನ ಅದೃಷ್ಟವಿದ್ದರೆ ತನಗೂ ಒಂದು ಹಸು ಸಿಗಬಹುದೆಂದೂ. ಹೊಲಕ್ಕಾಗದಿದ್ದರೆ ತನ್ನ ಮಕ್ಕಳಿಗಾದರೂ ಹಾಲಿನ ಭಾಗ್ಯ ಸಿಗಬಹುದೆಂದು, ತನ್ನ ಅದೃಷ್ಟ ಪರಿಶೀಲಿಸಲು ಆ ಊರಿಗೆ ಬೆಳಿಗ್ಗೆಯೇ ಹೋಗಿದ್ದ.
ತನಗೇ ನಂಬಿಕೆಯಾಗದಂತೆ ಆ ಹೆಂಗಸು ಇವನನ್ನು ಆದರದಿಂದ ಮಾತನಾಡಿಸಿ ವಿಧಿವಿಧಾನದಿಂದ ಗೋಪೂಜೆ ಮಾಡಿ ಅದನ್ನು ದಾನವಾಗಿ ಇವನಿಗೆ ಕೊಟ್ಟಳು. ಇಷ್ಟು ದಿನಗಳಲ್ಲಿ ಅವನಿಗೆ ನಂಬಿಕೆಯ ಕಿರಣ ಕಂಡಿದ್ದು ಮೊದಲಬಾರಿಗೆ. ಹುಮ್ಮಸ್ಸಿನಿಂದ ಹಸುವನ್ನು ಇನ್ನು ತನ್ನ ಊರಿಗೆ ಸಾಗಿಸುವದು ಹೇಗೆಂದು ಬಂಡೆಪ್ಪ ವಿಚಾರಿಸಹತ್ತಿದ.
ಹೀಗೆಯೇ ವಿಚಾರಿಸಲು, ಅದ್ಯಾವದೋ ಒಂದು ಟ್ರಕ್ಕು ಇನ್ನಷ್ಟು ಸ್ವಲ್ಪ ಹಸುಗಳನ್ನು ಹೊತ್ತುಕೊಂಡು ತನ್ನ ಊರಿನ ಮೇಲೆಯೇ ಹಾಯ್ದು, ಮುಂದೆ ಹೋಗುತ್ತಿರುವದು ಗೊತ್ತಾಯಿತು. ಸರಿ, ಹಿಂದೆ ಮುಂದೆ ನೋಡದೆ ಡ್ರೈವರನ ಕೈಯಲ್ಲಿ ತನ್ನ ಕೊನೆಯ ಐನೂರರ ನೋಟನ್ನು ತುರುಕಿ, ಅವನ ಕೈಯನ್ನು ಕಣ್ಣಿಗೆ ಒತ್ತಿಕೊಂಡು ತನ್ನನ್ನೂ, ತನ್ನ ಹಸುವನ್ನೂ ಊರಿಗೆ ತಲುಪಿಸೆಂದು ಅಂಗಲಾಚಿದ. ಅದ್ಯಾಕೋ ಆ ಡ್ರೈವರನ ವಕ್ರ ನಗು ಇವನು ಗಮನಿಸಲೇ ಇಲ್ಲ.
ಊರು ಹತ್ತಿರವಿರಬಹುದು. ಆ ಸಣ್ಣ ಘಾಟ್ ಬಂದಾಗಲೇ ಬಂಡೆಪ್ಪನಿಗೆ ಎಚ್ಚರವಾಗಿತ್ತು. ಡ್ರೈವರ್ ತನ್ನ ಗುಂಗಿನಲ್ಲಿ ಗಾಡಿ ಓಡಿಸುತ್ತಿದ್ದು, ಮುಂದೆ ಒಮ್ಮೆಲೇ ಬಂದ ತಿರುವನ್ನು ನೋಡದೆ ಸರಕ್ಕನೆ ತಿರುಗಿಸಲು ನೋಡಿ ಪಕ್ಕದ ಮರಕ್ಕೆ ಗುದ್ದಿದ್ದ. ಹಿಂದೆ ನಿಂತ ಹಸುಗಳು ಕಿರಿಚಿಕೊಂಡವು. ಕ್ಯಾಬಿನ್ ನಲ್ಲಿ ಕುಳಿತ ಇವರೀರ್ವರಿಗೂ ಸ್ವಲ್ಪ ಗಾಯ ಆಯಿತು. ಹೇಗೋ ಸುಧಾರಿಸಿಕೊಂಡು ಹೊರಗಿಳಿದು ಹಿಂದೆ ಬಂದು ನೋಡಲಾಗಿ, ಇವನ ಹಸುವಿನ ಹಸುವಿನ ಕಾಲಿಗೆ ತುಂಬಾ ರಕ್ತ ಬಂದು ಸೋರಲಾರಂಭಿಸಿತ್ತು. ಇನ್ನೇನು ಊರು ಬಂದೇಬಿಟ್ಟಿದೆಯಲ್ಲ, ಮನೆಗೆ ಹೋಗಿ ಅದಕ್ಕೆ ಆರೈಕೆ ಮಾಡಿದರಾಯಿತು ಎಂದು ಡ್ರೈವರ್ ನಿಗೆ ಹೊರಡಲು ಅವಸರ ಮಾಡಿದ. 
ತುಸು ದೂರ ಬಂದಿರಬಹುದು, ಗಾಡಿಯ ಬೆಳಕಿನಲ್ಲಿ ಕೆಲವು ಜನರು ರಸ್ತೆಗೆ ಅಡ್ಡ ನಿಂತು ಗಾಡಿ ನಿಲ್ಲಿಸಲು ಕೈ ಮಾಡುತ್ತಿರುವದು ಕಾಣಿಸಿತು. ಇವರು ಗಾಡಿ ನಿಲ್ಲಿಸಿದಾಗ ಒಬ್ಬಿಬ್ಬರು ಹಿಂದೆ ಹೋಗಿ ಅದೇನೋ ಪರಿಶೀಲಿಸಿದರು. ಬಂಡೆಪ್ಪನಿಗೆ ಒಮ್ಮೆಲೇ ಕೆಲವು ಸಂಗತಿಗಳು ಮನಕ್ಕೆ ಅಪ್ಪಳಿಸಿದವು. ಇತ್ತೀಚಿಗೆ ಹಸುಗಳನ್ನು ಸಾಗಿಸುವದನ್ನು ಸಂಶಯದಿಂದ ನೋಡಲಾಗುತ್ತಿದೆಯೆಂದೂ, ಅದು ಕಸಾಯಿ ಖಾನೆಗೇ ಕರೆದೊಯ್ಯಲಾಗುವುದೆಂದು ಜನರು ಭಾವಿಸುವರೆಂದೂ ಮತ್ತು ಅದಾಗಲೇ ಆದ ಅಪಘಾತದಲ್ಲಿ ತನ್ನ ಹಸುವಿನ ಕಾಲಿಗೆ ನೋವಾಗಿ ರಕ್ತ ಸೋರಲಾರಂಭಿಸಿದ್ದು. ತಕ್ಷಣ ಏನೋ ಹೊಳೆದು ಗಡಗಡ ನಡುಗಲಾರಂಭಿಸಿದ. ತನ್ನನ್ನೂ ಕಸಾಯಿ ಎಂದು ಇವರು ಭಾವಿಸಿದರೆ? ಆ ಕಲ್ಪನೆಯೇ ಅವನ ಬೆನ್ನ ಹುರಿಯನ್ನು ಕಂಪಿಸುವಂತೆ ಮಾಡಿತು. ಅದೆಲ್ಲೋ ಉತ್ತರದಲ್ಲಿ ಆದ ಸುದ್ದಿಯನ್ನು ಪತ್ರಿಕೆಯಲ್ಲಿ ಓದಿ ತಿಳಿದುಕೊಂಡಿದ್ದ. ಅಷ್ಟೊತ್ತಿಗಾಗಲೇ ಅವರು ಅವನನ್ನು ಗಾಡಿಯಿಂದ ಹೊರಗೆಳೆದಿದ್ದರು. ಯಾವನೋ ನೀನು, ಎಲ್ಲಿಗೆ ಹೋಗ್ತಾ ಇದ್ದೀಯಾ ಸೂ ಮಗನೆ.... ಇತ್ಯಾದಿ ಬೈಗಳುಗಳು ಇವನ ಕಿವಿಯಲ್ಲಿ ಬಂದು ಅಪ್ಪಳಿಸಹತ್ತಿದವು. 
ತಾನು ಕಸಾಯಿಯಲ್ಲ ಎಂದು ಅವರಿಗೆ ಮನವರಿಕೆ ಮಾಡಲೆಂದು ಕನಸಲ್ಲಿ ಉಚ್ಚರಿಸುವಂತೆ ಗಾಯತ್ರಿ ಮಂತ್ರ ಪಠಿಸಿ ತೋರಿಸಹತ್ತಿದ. ಜೊತೆಗೆ ಎಲ್ಲ ದೇವರ ನಾಮವನ್ನೂ ಹುಚ್ಚು ಹಿಡಿದವರ ಹಾಗೆ ಕೂಗುತ್ತ ಕುಣಿಯತೊಡಗಿದ. ಅವನಿಗೆ ಆದ ಭಯಕ್ಕೆ ಅವನು ಇಷ್ಟೆಲ್ಲಾ ಮಾಡುತ್ತಿರುವದು ಒಂದು ಪವಾಡವೇ ಸರಿ. ಆದರೆ ಅವರಿಗೇಕೋ ಇವನು ಮಾಡುತ್ತಿರುವದು ಇಷ್ಟವಾದ ಹಾಗೆ ಕಾಣಲಿಲ್ಲ. ಆ ಡ್ರೈವರ್ರೂ ಅವರಲ್ಲಿ ಒಬ್ಬನಾಗಿ ಹೋದಂತಿದ್ದ. ಆವಾಗಲೇ ಅವನು ಆ ಡ್ರೈವರ್ ನನ್ನು ಸರಿಯಾಗಿ ಗಮನಿಸಿದ್ದು. ತಕ್ಷಣ ತಾನು ಗಾಯತ್ರಿ ಮಂತ್ರ, ದೇವರ ನಾಮ ಜಪಿಸಿದ ತಪ್ಪಿನ ಅರಿವಾಯಿತು. ಆ ಜನರೆಲ್ಲಾ ಸೇರಿ ಬಂಡೆಪ್ಪನನ್ನು ಹಿಗ್ಗಾ ಮುಗ್ಗಾ ಥಳಿಸತೊಡಗಿದರು. ಆ ಹೊತ್ತಿನಲ್ಲಿ ಬುಲೆಟ್ ಶಬ್ದ ಹತ್ತಿರವಾದಂತೆ ಕೇಳಿಸಿತು. ತಕ್ಷಣ ಇವನನ್ನು ಹೊಡೆಯುತ್ತಿರುವವರೆಲ್ಲ ಪರಾರಿಯಾದರು. ಬಂಡೆಪ್ಪನಿಗೆ ಇದಾಗಲೇ ಸುಮಾರು ಏಟು ಬಿದ್ದಿದ್ದು, ಅವನ ಪ್ರಜ್ಞೆ ತಪ್ಪಲಾರಂಭಿಸಿತ್ತು. ಹತ್ತಿರ ಬಂದ ಬೂಟುಗಳ ಸಪ್ಪಳ ಕಿವಿ ಮೇಲೆ ಬೀಳುತ್ತಿತ್ತು ಅಷ್ಟೇ ಹೊರತು ಆ ಬೂಟುಗಳನ್ನು ಹಾಕಿ ಕೊಂಡವರ್ಯಾರು ಎಂದು ನೋಡಲು ಕಣ್ಣನ್ನು ತೆರೆದಿಡಲಾಗದೇ ಬಂಡೆಪ್ಪ ಅಲ್ಲಿಯೇ ಕುಸಿದ. 
******
ಪ್ರಜ್ಞೆ ಬಂದು ಕಣ್ಣು ತೆರೆದು ಸುತ್ತಲೂ ನೋಡಿದಾಗ ಆಸ್ಪತ್ರೆಯಂತಿತ್ತು. ತಾನು ಮಂಚದ ಮೇಲೆ ಮಲಗಿರುವದು, ತನ್ನ ಮೈತುಂಬ ಬ್ಯಾಂಡೇಜ್ ಹಾಕಿರುವದು ಗೊತ್ತಾಯಿತು. ಕಷ್ಟದಿಂದ ಪೂರ್ತಿ ಕಣ್ಣು ತೆರೆದು ಸುತ್ತಲೂ ನೋಡಿದ. ಪಕ್ಕದಲ್ಲಿ ಒಬ್ಬ ಇನ್ ಸ್ಪೆಕ್ಟರ್ ಕುಳಿತಿದ್ದ. ಇವನು ಕಣ್ತೆರೆಯುವದನ್ನು ನೋಡಿ, ಈಗ ಹೇಗಿದ್ದೀರಾ, ಮೈಗೆ ಹುಶಾರಾಗಿದೆಯೇ, ನಾನೇ ನಿಮ್ಮನ್ನು ಇಲ್ಲಿ ದಾಖಲಿಸಿದ್ದು, ನಿಮ್ಮ ಆರೈಕೆಯನ್ನು ಸರಕಾರ ನೋಡಿಕೊಳ್ಳುತ್ತೆ, ತಾವು ಯಾವುದೇ ರೀತಿಯ ಯೋಚನೆ ಮಾಡಬಾರದೆಂದು ಮುಗುಳ್ನಗುತ್ತಾ ಹೇಳಿದ. ತನಗೇಕೆ ಅವರು ಹೊಡೆದರು ಎಂದು ವಿಚಾರಿಸಿದಾಗ, "ನೋಡಿ ಇವರೇ, ಸಮಾಜದಲ್ಲಿ ಕೆಲವು ಸಮಾಜವಿರೋಧಿ ಜನರು ಯಾರನ್ನೋ ಬಲಿಪಶು ಮಾಡಿ ಅವರ ಬಲಿಯನ್ನು ತಮ್ಮ ಸ್ವಾರ್ಥಕ್ಕೋಸ್ಕರ ತೆಗೆದುಕೊಳ್ಳುತ್ತಾರೆ. ನಿಮ್ಮ ವಿಷಯದಲ್ಲೂ ಹಾಗೆ ಆಗುತ್ತಿತ್ತು, ನಾನು ಸಮಯಕ್ಕೆ ಸರಿಯಾಗಿ ಆ ಕಡೆಯಿಂದ ಹೋಗುತ್ತಿದ್ದೆ, ನನ್ನನ್ನು ನೋಡಿ ಅವರೆಲ್ಲ ಓಡಿಹೋದರು" ಎಂದ. ಬಂಡೆಪ್ಪನಿಗೇನೂ ಅರ್ಥವಾಗಲಿಲ್ಲ. 
"well-done myboy! ಒಳ್ಳೆಯ ಸಮಯಕ್ಕೆ ಹೋಗಿ ನೀನು ಈ ಬಡ ರೈತನ ಜೀವನ ಉಳಿಸಿದ್ದೀಯ, ಇಲ್ಲದಿದ್ದರೆ ಆ ಹಂತಕರು ಇವನನ್ನು ಮುಗಿಸಿ ಅವನ ಹಸುವಿನಜೊತೆಗೆ ಪರಾರಿಯಾಗುತ್ತಿದ್ದರೆನೋ. ನಂತರ ಕಸಾಯಿ ಖಾನೆಗೆ ಸಾಗಿಸುವ ವ್ಯಕ್ತಿಯ ಬರ್ಬರ ಹತ್ಯೆ ಎಂದು ಸುದ್ದಿಯಾಗುತ್ತಿತ್ತು. ಆ ಸುದ್ದಿಯನ್ನು ಎರಡೂ ಕೋಮಿನವರು ತಮ್ಮ ಮನಸ್ಸಿಗೆ ಬಂದಂತೆ ಬಳಸುತ್ತಿದ್ದರು" ಆ ಇನ್ ಸ್ಪೆಕ್ಟರಿನ ಮೇಲಿನ ಅಧಿಕಾರಿ ಇರಬಹುದು, ಅದೇ ತಾನೇ ತಾನಿದ್ದ ಮಂಚದ ಕಡೆಗೆ ಬಂದು ಇನ್ ಸ್ಪೆಕ್ಟರಿನ ಬೆನ್ನು ಚಪ್ಪರಿಸಿ "well-done ಅಖ್ಲಾಕ್ myboy, well-done !" ಎನ್ನುತ್ತಿದ್ದರು.



Wednesday, 23 September 2015

ವಿಕಲ್ಪ

ಮೈಯೆಲ್ಲಾ ಭಾರ. ಹಣೆಯ ಮೇಲೆ ಸಣ್ಣಗೆ ಬೆವರು. ಬರುಬರುತ್ತಾ ಇಡೀ ದೇಹ ಬೆವರಿನಿಂದ ಒದ್ದೆಯಾಗಿದೆ ಎನಿಸಿತು. ಹೆಜ್ಜೆ ಮುಂದಿಡಲೂ ಪ್ರಯಾಸ ಪಡುತ್ತಿದ್ದೆ. ಬಲಗೈ ತನ್ನಂತಾನೇ ನಡದ ಮೇಲೊಮ್ಮೆ, ಹೊಟ್ಟೆಯ ಮೇಲೊಮ್ಮೆ ಸವರಿಕೊಳ್ಳುತ್ತಿತ್ತು. ಯಾವಾಗಲೂ ಹಾಕಿಕೊಳ್ಳುವ ೪೦ ಇಂಚಿನ ಶರ್ಟ್, ೩೨ ಇಂಚಿನ ಪ್ಯಾಂಟ್ ಹಾಕಿಕೊಳ್ಳಲಾರದೆ ಯಾವದೋ ಬಾಬಾ ನ ನೈಟಿ ಥರ ಹಾಕಿಕೊಂಡಿದ್ದೆ. ನನ್ನ ಉಬ್ಬಿದ ಹೊಟ್ಟೆ ನೋಡಲು ನನಗೇ ನಾಚಿಕೆ. ಗಂಡಸರು ಗರ್ಭದಿಂದ ಆಗುತ್ತಾರೆ ಎಂದು ಮೊದಲು ಎಲ್ಲಿಯಾದರೂ ಕೇಳಿದ್ದೀರಾ?

ನಾನೂ ಕೇಳಿರಲಿಲ್ಲ. ಆದರೆ ಈಗ ನಾನೇ ಸ್ವತಃ ಆಗಿರುವೆ. ಆದದ್ದಕ್ಕೆ ಅನುಭವಿಸುತ್ತಿದ್ದೇನೆ. ನನ್ನವಳು "ನಿಧಾನ ರೀ, ಮೆಲ್ಲಗೆ ಮೆಟ್ಟಿಲು ಹತ್ತಿ, ಒಂದೊಂದೇ ಕಾಲು ಎತ್ತಿ ಇಡಿ, ತುಂಬಾ ಆಯಾಸ ಆಗುತ್ತಿದೆಯಾ?" ಎನ್ನುತ್ತಿದ್ದಳು. ಅವೆಲ್ಲಾ ಕಾಳಜಿಯ ಪ್ರಶ್ನೆಗಳ ಹೊರತಾಗಿಯೂ ಯಾಕೋ ಅವಳಲ್ಲಿ ಕುಹಕದ ನಗೆಯನ್ನೂ ಹುಡುಕಲು ಪ್ರಯತ್ನಿಸಿದೆ. ಬಹುಶಃ ನಗುತ್ತಿದ್ದಳೋ ಏನೋ. ನನಗೆ ಅವಳಿಗೆ ಒಪ್ಪಂದ ಆವಾಗಲೇ ಆಗಿತ್ತು. ಬಹಳ ವರ್ಷಗಳೇ ಕಳೆದಿದ್ದವು ಅನಿಸುತ್ತೆ. ಪ್ರೀತಿ ಶುರು ಮಾಡಿದಾಗಿನ ಮೊದಲ ದಿನಗಳು. ನನ್ನ ಸುಖ ನಿನಗೆ, ನಿನ್ನ ದುಃಖ ನನಗೆ ಎನ್ನುವಂತಹ ದಿನಗಳು. "ಅಯ್ಯೋ ಪಾಪ, ನೀವು ಹೆಣ್ಣುಗಳೆಷ್ಟು ತೊಂದರೆ ಅನುಭವಿಸಬೇಕು. ತಿಂಗಳಲ್ಲೊಮ್ಮೆ ನೋವಿನ ೩-೪ ದಿನಗಳಲ್ಲದೆ ಗರ್ಭಿಣಿಯರಾದರೆ ೯ ತಿಂಗಳುಗಳ ಕಷ್ಟ ಬೆರೆ. ಸಾಲದ್ದಕ್ಕೆ ಹೆರಿಗೆಯ ಮೂಲಕ ಪುನರ್ಜನ್ಮ. ನಿನ್ನೆಲ್ಲ ಕಷ್ಟಗಳನ್ನೂ ಆ ದೇವರು ನನಗೆ ಕೊಡುವಂತೆ ಆಗಿದ್ದರೆ? " ಅಂತೆಲ್ಲ ನಾನು ಅವಳಿಗೆ ಮುದ್ದು ಮಾಡುತ್ತಾ ಹೇಳುತ್ತಿದ್ದೆ. ಅವಳು impress ಆಗುವದಲ್ಲದೆ ಅವಳಿಗೆ ಅದಾಗಲೇ ನನ್ನ ಹೆಂಗರುಳಿನ ಪರಿಚಯವೂ ಆಗಿತ್ತು. "ಮುಂದಿನ ಜನ್ಮದಲ್ಲಿ ನೀನು ಗಂಡನಾಗು, ನಾನು ಹೆಂಡತಿಯಾಗುತ್ತೇನೆ" ಎಂದು ಸುಮ್ಮ ಸುಮ್ಮನೆ ಭಾಷೆ ತೆಗೆದುಕೊಂಡಿದ್ದು ಆಗ ಮಕ್ಕಳ ವರ್ತನೆ ಅನ್ನಿಸಲೇ ಇಲ್ಲ.

ಆ ದೇವರು ನನ್ನ ಮಾತುಗಳನ್ನೆಲ್ಲ ಈಗ ನಿಜ ಮಾಡಿದ್ದಾನೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಹೆರಿಗೆಯಾಗಿಬಿಡುತ್ತದೆ. ಇಷ್ಟು ತಿಂಗಳು ಹೊರಲಾರದೆ ಹೊಟ್ಟೆ ಹೊತ್ತು ಹೊತ್ತು ಸಾಕಾಗಿದೆ. ನಾನೂ ಅಂದುಕೊಂಡಿದ್ದೇನೆ, ನನಗೆ ಮಗು ಹೆತ್ತು ಕೊಡುವದಷ್ಟೇ ಕೆಲಸ. ಅದನ್ನು ಸಾಕುವದು ನೀನೆ ಎಲ್ಲ ಹೆಂಗಸರ ತರಹ ಮಾಡು. ಅದನ್ನೂ ನನಗೇ ಒಪ್ಪಿಸಬಿಡಬೇಡ, ಒಪ್ಪಂದ, ನಾನು ನಿನ್ನ ಕಷ್ಟ ಹೊರುವದು ಆಗಿತ್ತು. ಹೊತ್ತು ಹೆತ್ತು ಕೊಟ್ಟರೆ ನನ್ನ ಜವಾಬ್ದಾರಿ ಮುಗಿದಂತೆ. ಈ ಮಾತುಗಳನ್ನು ಹೆರಿಗೆ ಆಗುವದರೊಳಗಾಗಿ ಅವಳಿಗೆ ಹೇಳಿಬಿಡಬೇಕು ಎಂದುಕೊಂಡಿದ್ದೇನೆ.

ಅದ್ಯಾಕೋ ಹೊಟ್ಟೆಯಲ್ಲಿ ತುಂಬಾ ಪ್ರೆಷರ್ ಬಂದ ಹಾಗೆ ಆಯಿತು. ಇವಳಿಗೆ ಕಿಚಾಯಿಸುವ ರೀತಿಯಲ್ಲೇ ಕೇಳಿದೆ "ಅಲ್ವೇ, ಹೆಂಗಸರು ಹೆರುವಾಗ ನಂಬರ್ ಟೂ ಬಂದರೆ ಏನು ಕತೆಯೇ? ತಮಾಷೆಗಾಗಿದ್ದರೂ ನನ್ನ ಕುತೂಹಲ ಕೃತಕವಾಗಿರಲಿಲ್ಲ. ಅವಳು "ಥೂ ನಿಮ್ಮ, ಎಂಥ ಪ್ರಶ್ನೆ ಕೆಳ್ತೀರಾರೀ" ಎಂದುಗಿದಳು. ನನಗೂ ನಗು ಬಂತು. ಬರುತ್ತಾ ಬರುತ್ತಾ ಮುಗುಳ್ನಗು ದೊಡ್ಡ ನಗೆಯಾಗಹತ್ತಿತು. ನಗೆ ಜಾಸ್ತಿಯಾದಂತಲೇ ಹೊಟ್ಟೆಯಲ್ಲಿಯ ಒತ್ತಡವೂ ಜಾಸ್ತಿಯಾಗತೊಡಗಿತು. ಅಬ್ಬಾ ಇನ್ನು ಸಹಿಸಲಾರೆ ಎನ್ನುವಷ್ಟರಲ್ಲಿಯೇ ......

ಫ್ಲಷ್ ಮಾಡಿ ಬಾತ್ರೂಮಿಂದ ಹೊರಗೆ ಬಂದಾಗಲೇ ಟೈಮ್ ನೋಡಿದ್ದು. ರಾತ್ರಿಯ ೨.೩೬ ಆಗಿತ್ತು. ಇದೇಕೆ ಇಷ್ಟೊತ್ತಿಗೆ ಬಾಥ್ ರೂಮಿಗೆ ಹೋಗುವ ಪ್ರಮೇಯ ಬಂದಿತು ಅಂತ ಯೋಚಿಸಿದೆ. ಚೆನ್ನಾಗಿವೆ ಅಂತ ಸ್ವಲ್ಪ ಜಾಸ್ತಿಯೇ ತಿಂದ ಇಡ್ಲಿಗಳ ನೆನಪಾಯಿತು. ಮತ್ತೆ ಹೊದೆದುಕೊಂಡು ಮಲಗಿದೆ.

***********
ಮರುದಿನ ಪರೀಕ್ಷೆ ಇದೆ. ಅದೂ ಮಾಥ್ಸ್ ! ನನಗೋ ಆ ಕ್ಯಾಲ್ಕುಲಸ್, ಟ್ರಿಗೊನೋಮೆಟ್ರಿ, ಫಾರ್ಮುಲಾಗಳನ್ನು ಮಾಡೀ ಮಾಡೀ ಸಾಕಾಗಿಹೋಗಿತ್ತು. ಅಂದರೂ ಈ ಸಲ ತುಂಬಾ ಕಷ್ಟಪಟ್ಟು ಅಭ್ಯಾಸ ಮಾಡಿ ಒಂಚೂರು ಆತ್ಮ ವಿಶಾಸ ಮೂಡಿತ್ತು. ಪರೀಕ್ಷೆಗೆ ಸ್ವಲ್ಪ ಮೊದಲೇ ಹೋಗಿ ಇನ್ನೊದು ಸ್ವಲ್ಪ ಅಲ್ಲಿಯೇ ಕುಳಿತು ಓದಿದರಾಯಿತು ಎಂದುಕೊಂಡೆ. ಬೇಗನೆ ಸ್ನಾನ, ಟಿಫಿನ್ ಮುಗಿಸಿ ಬಟ್ಟೆ ಹಾಕಿಕೊಂಡು ಕಾಲೇಜಿನತ್ತ ಹೊರಟೆ. ದಿನವೂ ನಡೆದುಕೊಂಡೇ ಹೋಗಿ ರೂಢಿ. ಪ್ರತಿ ಸಲದಂತೆ ಸುತ್ತು ಹಾಕಿ ಒಳ್ಳೆಯ ರೋಡಿರುವ ಕಡೆಯ ದಾರಿ ತೆಗೆದುಕೊಳ್ಳಲಾರದೇ ಇವತ್ತು ಬೇಗ ಹೋಗ ಬೇಕೆಂದು ಸಮೀಪದ ಅಂಕುಡೊಂಕಾದ, ಗುಡ್ಡದ ದಾರಿ ಹಿಡಿದೆ. ಮಧ್ಯೆ ಕೆಲವುಮಾತ್ರ ಮನೆಗಳಿದ್ದವು. ಜನರು ತುಂಬಾ ಕಡಿಮೆ. ಇದೇನು ಇಷ್ಟು ಹೊತ್ತಿನಲ್ಲಿ ಜನರೇಕೆ ಕಾಣುತ್ತಿಲ್ಲ ಎಂದುಕೊಂಡೇ ದಾಪುಗಾಲು ಹಾಕುತ್ತಿದ್ದೆ. ಥಟ್ಟನೆ ಕಾಲಿಗೆ ಏನೋ ತಗುಲಿ ಉರುಳಿಹೋದಂತಾಯಿತು. ಕೆಳಗೆ ನೋಡಿದಾಗ ಮಿರಿ ಮಿರಿ ಮಿಂಚುವ ಗೋಲಿ!

ಒಂಥರಾ ಆಕರ್ಷಕವಾದ ನೀಲಿ, ಹಸಿರು ಬಣ್ಣದ, ಇಡೀ ಬ್ರಹ್ಮಾಂಡವನ್ನೇ ತನ್ನೊಳಗೆ ಅಡಕ ಮಾಡಿಕೊಂಡಷ್ಟು ಸುಂದರವಾದ ಗೋಲಿ ಗುಂಡ! ಅಯ್ಯೋ ಎಷ್ಟು ಸುಂದರವಾಗಿದೆ ಎಂದು ಅದನ್ನು ಕೈಗೆತ್ತಿಕೊಂಡೆ. ಕೈಯಲ್ಲಿ ತಿರುಗಿಸುತ್ತಾ ಅದನ್ನೇ ನೋಡುತ್ತಾ ಮುಂದೆ ನಡೆದು ನೋಡಿದರೆ ಅಲ್ಲಿ ಇನ್ನೊಂದು ಗೋಲಿ ಬಿದ್ದಿತ್ತು! ಅದು ಗೋಲಿಯೇ ಹೌದಲ್ಲವೋ ಎಂದು ನೋಡಲಿಕ್ಕೆ ಕಾಲಿನಿಂದ ಒದ್ದೆ. ಬಿಸಿಲಿಗೆ ಮಿಂಚುತ್ತಾ ಅದು ಉರುಳಿತು. ಚಿಕ್ಕಂದಿನಲ್ಲಿ ಗೋಲಿ ಆಟಕ್ಕಿಂತ ಆ ಬಣ್ಣ ಬಣ್ಣದ ಗೋಲಿಗಳು ಮೋಹಕವಾಗಿ ಉರುಳುವದನ್ನು ನೋಡುವದೇ ಕಣ್ಣಿಗೆ ಹಬ್ಬ. ಹಲವು ಸಲ ನನ್ನ ಹತ್ತಿರ ಇರುವದಕ್ಕಿಂತ ಬೇರೆಯವರ ಹತ್ತಿರ ಇರುವ ಗೋಲಿಗಳನ್ನು ನೊಡಿ ಅಸೂಯೆ ಪಟ್ಟಿದ್ದುಂಟು. ಬೇರೆಯವರ ಗೋಲಿಗಳು ನನ್ನವುಕ್ಕಿಂತ ಅದೇಕೆ ಸುಂದರ? ಅವಷ್ಟೂ ನನ್ನ ಕಡೆ ಬಂದರೆಷ್ಟು ಚೆನ್ನ! ಎಂತೆಲ್ಲಾ ಆಸೆಯಾಗುತ್ತಿತ್ತು. ಕಾಲಿನ ಬಳಿಯಿರುವ ಗೋಲಿಯನ್ನು ಎತ್ತಿಕೊಂಡೆ. ಯಾರೋ ಪಾಪ ಚಿಕ್ಕ ಮಕ್ಕಳು ಆಟವಾಡುತ್ತ ಮರೆತು ಹೋಗಿರಬೇಕು. ಮುಂದೆ ಹೆಜ್ಜೆ ಹಾಕಿದೆ.

ಅರೆರೆ! ಇನ್ನೊಂದು ಗೋಲಿ! ಅದರ ಪಕ್ಕದಲ್ಲಿನ್ನೊಂದು! ಅಲ್ಲಿ ಮೂರ್ನಾಲ್ಕು! ಒಂದೊಂದೇ ಗೋಲಿ ಎತ್ತಿಕೊಳ್ಳುತ್ತ ಹೋದೆ. ಕೈಗಳು ತುಂಬಿದಾಗ ಯಾರಿಗಾದರೂ ಚಿಕ್ಕ ಮಕ್ಕಳಿಗೆ ಕೊಟ್ಟರಾಯಿತು ಎಂದುಕೊಂಡು ಜೇಬಲ್ಲಿಟ್ಟುಕೊಳ್ಳುತ್ತಾ ಹೋದೆ. ಬರಬರುತ್ತಾ ಜೇಬುಗಳೂ ತುಂಬಹತ್ತಿದವು ಆದರೆ ಗೋಲಿಗಳು ಮುಗಿಯಲಿಲ್ಲ. ಒಂದಕ್ಕಿಂತ ಒಂದು ಸುಂದರ, ಚಿತ್ತಾಕರ್ಷಕ, ರಂಗು ರಂಗಿನ ಗೋಲಿಗಳು. ಇಂಥವನ್ನು ಇಲ್ಲಿಯೇ ಬಿಟ್ಟು ಹೋಗಲು ಮನಸ್ಸಾಗಲೇ ಇಲ್ಲ. ಜೇಬು ಪೂರ್ತಿ ತುಂಬಿದಾಗ ಅವುಗಳನ್ನೆಲ್ಲ ತೆಗೆದು ಕೈಯಲ್ಲಿದ್ದ ಚೀಲದಲ್ಲಿ ಹಾಕಿಕೊಳ್ಳೋಣವೆಂದು ಜೇಬಿನಿಂದ ತೆಗೆದೆ. ಕೆಳಗೆ ಇನ್ನೂ ಸುಮಾರು ಗೋಲಿಗಳು ಬಿದ್ದಿದ್ದವು. ಅವನ್ನೆಲ್ಲ ಬೇಗ ಆರಿಸಿಕೊಬೇಕು ಎನ್ನುತ್ತಾ ಬ್ಯಾಗಲ್ಲಿ ಹಾಕಲು ನೋಡಿದರೆ ಕೆಳಗೆ ಬಿದ್ದು ಎಲ್ಲ ಚೆಲ್ಲಾಪಿಲ್ಲಿ! ಬ್ಯಾಗಿನ ಜಿಪ್ ತೆರೆಯಲಾರದೇ ಅದರಲ್ಲಿ ಹಾಕಲು ಹೋಗಿದ್ದೆ, ಥೋ ಎಂಥವನು ನಾನು! ನನ್ನನ್ನು ನಾನೇ ಬೈದುಕೊಳ್ಳುತ್ತಾ, ಅಷ್ಟು ಗೋಲಿಗಳು ಸಿಕ್ಕಿದ ಅದೃಷ್ಟ ಮೆಚ್ಚಿಕೊಳ್ಳುತ್ತಾ ಮತ್ತೆ ಗೋಲಿಗಳನ್ನು ಹೆಕ್ಕತೊಡಗಿದೆ. ಒಂದು, ಎರಡು, ಮೂರು.. ಅದೋ ಅಲ್ಲೊಂದು... ಇನ್ನೊಂದು... ಗೋಲಿಗಳ ಹೆಕ್ಕುವಿಕೆಯಲ್ಲಿ ಪರೀಕ್ಷೆಯ ಟೈಮಾದದ್ದೇ ತೋಚಲಿಲ್ಲ........

********

ಅವಸರದಲ್ಲಿ ಬೆಟ್ಟ ಹತ್ತತೊಡಗಿದ್ದೆ. ಕಲ್ಲು ಮುಳ್ಳುಗಳಿಂದ ಕೂಡಿರುವ ಹಸಿರು ಬೆಟ್ಟ. ಅಲ್ಲಲ್ಲಿ ಪೊದೆಗಳು. ಅವುಗಳಲ್ಲಿ ನೀಲಿ, ಬಿಳಿಯ ಹೂವುಗಳು. ಆ ಹೂಗಳಲ್ಲಿ ಕೇಸರಿಯ ಕೇಸರಗಳು. ಮುಂಜಾವಿನ ಮಂಜು ಅದೇ ತಾನೆ ಕರಗಲಾರಂಭಿಸಿತ್ತು. ಪ್ರಕೃತಿಯು ಸ್ನಾನ ಮಾಡಿ ಹೊರಬಂದು ತನ್ನ ಕೂದಲು ರಾಶಿಯನ್ನು ಪಟಕ್ಕನೆ ಝಾಡಿಸಿದಾಗ ಉದುರುವ ಹನಿಗಳಂತೆ ಇಬ್ಬನಿಯ ಬಿಂದುಗಳು ಆ ಹೂಗಳನ್ನು ಮುತ್ತಿಟ್ಟಿದ್ದವು. ನಿನ್ನೆ ತಿಂದು ಅರ್ಧ ಬಿಟ್ಟಿದ್ದ ಕೆಂಪಾದ ಹಣ್ಣುಗಳು ಪಕ್ಷಿಗಳ ಕಚ್ಚುವದರಲ್ಲಿನ ಪ್ರೀತಿ ಸಾರಿ ಹೇಳುತ್ತಿದ್ದಂತೆ ಬಿದ್ದಿದ್ದವು. ಭೂಮಿ ತಿರುಗುವಷ್ಟೇ ನಿಧಾನದ ವೇಗದಲ್ಲಿ, ತನಗೇನೂ ಅವಸರವಿಲ್ಲಂದತೆ ಅಲ್ಲೊಂದು ಬಸವನ ಹುಳು ನಡೆಯುತ್ತಾ, ತಾನು ಹೋದ ದಾರಿಯನ್ನು ಹಸಿಯಾಗಿಸಿತ್ತು. ಹೂಗಳು ದುಂಬಿಯ ದಾರಿಯನ್ನೇ ನೋಡುತ್ತಿದ್ದಂತೆನಿಸಿತು. ಬೆಟ್ಟದ ತುದಿಯಲ್ಲಿ ಕೆಂಪು ಸೂರ್ಯ ಬಿಸಿಲ್ಗುದೆರೆಯೇರಿ ಹತ್ತುತ್ತಿದ್ದ. ಸೂರ್ಯನೂ ಎಲಾ! ಬಣ್ಣ ಬದಲಿಸುವ ಗೋರಂಟಿಯೇ ಎಂದುಕೊಂಡೆ.

ಬೇಗ ಹೆಜ್ಜೆಯಿಡಲಾರಂಭಿಸಿದ್ದರಿಂದ ಸೆಕೆಯೂ, ಸ್ವಲ್ಪ ನಿಂತೊಡನೆ ಮುಂಜಾವಿನ ತಂಗಾಳಿಗೆ ಆಹ್ಲಾದವೂ ಆಗತೊಡಗಿತ್ತು. ಪುಪ್ಪುಸ ಉಬ್ಬಿಸಿದಷ್ಟೂ ಸಿಗುವ ಆಕ್ಸಿಜನ್, ಕಿವಿ ಕೊಟ್ಟಷ್ಟೂ ಇಂಪಾದ ನಾದ, ಹೊರಟ ಕೆಲಸವೇ ಮರೆತಷ್ಟು ಮತ್ತು ಮರೆಯುವದರ ಬಗ್ಗೆ ಚಿಂತೆಯಿರದಷ್ಟು ಆನಂದ. ಇವೆಲ್ಲವದರ ಇರುವಿಕೆಯ ಮುಂದೆ ತನ್ನ ಇರುವಿಕೆ ಇರುವಿಕೆಯೇ ಎನಿಸಲಿಲ್ಲ.

ಎಲ್ಲೆಲ್ಲೋ ನೋಡಿ ಪ್ರಕೃತಿಯ ಸೌಂದರ್ಯ ಸವಿಯುವಷ್ಟು ನನ್ನ ಹತ್ತಿರ ಸಮಯವಿಲ್ಲ ಎಂದು ಅರಿವು ಬರುವಷ್ಟರಲ್ಲೇ ಬೆಟ್ಟದ ತುದಿ ತಲುಪಿದ್ದೆ. ಅರೆ, ನಾನು ಹೋಗಬೇಕಾದ ಜಾಗವೆಲ್ಲಿ ಹೋಯಿತು? ನಾನೇನಾದರೂ ದಾರಿ ತಪ್ಪಿದೆನೇ? ಬೆಟ್ಟದ ತುದಿಯಿಂದ ಸುತ್ತಲೂ ಬರೀ ಕಾಡು ಕಾಣಿಸುತ್ತಿತ್ತು. ಎಲ್ಲಿಯೂ ನಾಗರಿಕತೆಯ ಲವಲೇಶವೂ ಇರಲಿಲ್ಲ. ನಾನೆಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತಿದ್ದೆ? ನಾನ್ಯಾರು? ಈಗೆಲ್ಲಿದ್ದೇನೆ ? ಪ್ರಶ್ನೆಗಳು ಆ ಹೂಗಳು ಕಾಯುತ್ತಿರುವ ದುಂಬಿಗಳಂತೆ ತಲೆಯ ತುಂಬಾ ಹಾರಾಡಿ ಗುಂಯ್ ಗುಡ ತೊಡಗಿದವು. ಹಾಗೆಯೇ ಕಿವಿಯ ತುಂಬಾ ಹತ್ತಿರ ಒಂದು ದುಂಬಿಯನ್ನು ಓಡಿಸುವದಕ್ಕೋಸ್ಕರ ಕೈ ಮಾಡಿದ್ದಷ್ಟೇ.....

ಸರಕ್ಕನೇ ಕಾಲು ಜಾರಿತು. ಒಮ್ಮೆಲೇ ತಲೆ ತಿರುಗಿದ ಅನುಭವ. ಏನನ್ನೂ ಹಿಡಿದುಕೊಳ್ಳುವ ಪ್ರಶ್ನೆಯೇ ಇಲ್ಲ. ಇನ್ನೇನು ತಳ ಸೇರಿಬಿಡುತ್ತೇನೆ. ತಲೆ ಮೊದಲಪ್ಪಳಿಸುತ್ತದೆಯೋ ಅಥವಾ ಬೆನ್ನ ಮೇಲೆ ಬೀಳುತ್ತೇನೋ ಬಿದ್ದ ಮೇಲೆಯೇ ಗೊತ್ತಾಗುತ್ತದೆ. ಚಿಕ್ಕವನಿದ್ದಾಗ ನಿರ್ಮಾಣದ ಹಂತದಲ್ಲಿದ್ದ ಒಂದೇ ಮಜಲಿನ ಪುಟ್ಟ ಮನೆಯ ಮಾಳಿಗೆಯಿಂದ ಕೆಳಗಡೆಯಿದ್ದ ಮರಳಿನ ಮೇಲೆ ಹಾರಿದ್ದೆ. ಪೆಟ್ಟೇನೂ ಆಗುವದಿಲ್ಲ ಎಂದುಕೊಂಡಿದ್ದವನು ಮರಳಿಗೆ ಅಪ್ಪಳಿಸಿ ತಲೆ ಎದೆಯವರೆಗೂ ಹೊಡಿದುಕೊಂಡಾಗಲೇ ಅದರ ನೋವಿನ ಅರಿವಾದದ್ದು. ಅದೆಷ್ಟೋ ಸಲ ಅಂದುಕೊಂಡಿದ್ದೆ. ಎತ್ತರದ ಬೆಟ್ಟದಮೇಲಿನಿಂದ ಧುಮುಕಿದಾಗ ಎಲ್ಲಿಂದಲೋ ಗರಿಕೆದರಿ ನಮ್ಮ ರೆಕ್ಕೆಗಳು ತೆರೆದುಕೊಂಡರೆ? ಜೀವನ ಪೂರ್ತಿ ಯಾರಿಗೂ ಹೇಳುವದಿಲ್ಲ, ಪುನಃ ಹಾರುವ ಅದೃಷ್ಟ ಇರದಿದ್ದರೂ ಪರವಾಗಿಲ್ಲ, ಒಂದು ಸಲ ರೆಕ್ಕೆ ಕೊಡಪ್ಪ ದೇವರೇ ಎಂದು ಎಷ್ಟು ಸಲ ದೇವರ ಜೊತೆ ಸರಸವಾಡಿಲ್ಲ ನಾನು ? ಇದೋ, ಈಗ ಬೀಳುತ್ತಿದ್ದೇನೆ. ಜಗತ್ತಿನ ಸೆಳೆಯುವ ಪಾತಾಳದಂಥ ಶೃಂಗದಿಂದ, ಜಗತ್ತಿನ ಎಲ್ಲ ಮೋಹ ಮಾಯಗಳಿಂದ ಮುಕ್ತನಾಗಿ, ರೆಕ್ಕೆಗಳು ತೆರೆದುಕೊಳ್ಳಬಹುದೇನೋ ಎನ್ನುವ ಅಮಾಯಕ ಆಸೆಯೂ ಇರದೇ ಕಂದರವನ್ನಪ್ಪುವ ಕಂದನಾಗಿ ....

ಅಷ್ಟರಲ್ಲಿ ದೂರದಲ್ಲೊಂದು ಆಕೃತಿ ಕಂಡಿತು. ಬಿಳಿಯ ಗಡ್ಡ, ತಲೆಯ ಮೇಲೊಂದು ಮುಂಡಾಸು, ಮೈಮೇಲೆ ಲುಂಗಿ, ಜುಬ್ಬಾ ಮೇಲೊಂದು ಅಂದದ, ಬಣ್ಣದ ಶಾಲು, ಮೊದಲು ಅಸ್ಪಷ್ಟವಾಗಿ ಕಾಣುತ್ತಿದ್ದದ್ದು ಈಗ ದಿಗ್ಗನೆ ಸ್ಪಷ್ಟವಾಗಿ ಕಾಣತೊಡಗಿತ್ತು. ನಾನು ಬೀಳುತ್ತಿದ್ದ ವೇಗವೇ ಅಂಥದ್ದಿರಬೇಕೆನೋ. ಅವರೊಬ್ಬ ಯೋಗಿ. ಮುಖದ ಮೇಲಿನ ಮಂದಹಾಸ ಎಂಥದೇ ನೋವನ್ನು ಮರೆಸುವಷ್ಟು. ಗಾಳಿಗೆ ಹಾರುವ ಬಿಳಿಯ ಮುಂಗುರುಗಳು ಜಗತ್ತಿನ ಎಲ್ಲ ಕಷ್ಟಗಳ ಹಗುರತನವನ್ನು ತೋರುತ್ತಿದ್ದವು. ಮುಖದ ಮೇಲಿನ ಕಳೆ ಜೀವಿಸುವ ಹುಮ್ಮಸ್ಸನ್ನು ಬೆಳಗುವಷ್ಟು ಕಾಂತಿಯುತವಾಗಿತ್ತು. ಅವರು ನನ್ನ ಕಡೆಯೇ ನೋಡುತ್ತಿದ್ದರು. ನಾನು ಅವರಿಗೆ ಎರಡೂ ಕೈಯಿಂದ ನಮಸ್ಕರಿಸಿದೆ. ಅವರು ಕಣ್ಣಲ್ಲೇ ಸನ್ನೆ ಮಾಡಿ ಅಂಗೀಕರಿಸಿದರು. ನಾನು ಬೀಳುತ್ತಿದ್ದೇನೆ ಉಳಿಸಿರಿ ಎಂದೆ. ಅವರು ನಸುನಕ್ಕರು. ಇನ್ನೇನು ಅಪ್ಪಳಿಸುತ್ತಿದ್ದೇನೆ ಎಂದೆನಿಸಿತು. ಜೀವಿಸುವ ಹಂಬಲವೂ ಒಮ್ಮಿಂದೊಮ್ಮೆಲೇ ಬತ್ತಿಹೋಗಿತ್ತು. ಸಾವನ್ನೇ ಆನಂದಿಸುತ್ತ ಸತ್ತರೆ ಹೇಗೆ ಎನಿಸಿತು. ಸುಮ್ಮನೆ ಅವರೆಡೆಗೆ ಎರಡೂ ಕೈ ಚಾಚಿದೆ. ಅವರೂ ತಮ್ಮ ಕೈಗಳನ್ನು ನನ್ನೆಡೆಗೆ ಚಾಚಿದರು....

ಬಿಳಿ ಹೊಗೆ. ತಂಪು ತಂಪಾದ ವಾತಾವರಣ. ಮೈಯೆಲ್ಲಾ ಹಗುರವೆನಿಸಿತು. ಕೈಕಾಲು ನೋಡಿಕೊಂಡೆ, ಏನೂ ಆಗಿರಲಿಲ್ಲ. ಕೆಳಗೆ ನೋಡಿದೆ. ನೆಲವಿರಲಿಲ್ಲ. ನಾನು ಹಾರತೊಡಗಿದ್ದೆ.
**********

ಇರು ಇರು ಇರು ಕಾಲವೇ, ಇಷ್ಟು ಬೇಗ ಗತಿಸಬೇಡ. ಜೀವನ ಕೆಲವೊಂದು ಸಲ ಕನಸಿನಷ್ಟೇ ಸುಂದರ, ಅವುಗಳಷ್ಟೇ ಗೆಲುವಿನ, ಅವುಗಳಷ್ಟೇ ಮೋಜಿನ, ಅವುಗಳಷ್ಟೇ ಅಸಹಾಯಕ, ಅವುಗಳಷ್ಟೇ ಅಮಾಯಕ. ಕನಸನ್ನೊಮ್ಮೆ ಪೂರ್ತಿ ಜೀವಿಸಲೇ? ಈ ಕನಸು ಜೀವನವಲ್ಲವೇ? ಅಥವಾ ಜೀವನವೇ ಒಂದು ಕನಸೇ?